Tuesday, November 8, 2016

ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ

ಸ್ನೇಹಿತರೇ,

ಭ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳಿಗೆ ತಿಲಾಂಜಲಿ ನೀಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆಗಳು..

೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ನೋಟುಗಳ ಅಧಿಕೃತ ಚಲಾವಣೆಯನ್ನು ರದ್ದು ಗೊಳಿಸಿರುವ ಕೇಂದ್ರ ಸರ್ಕಾರದ ದಿಢೀರ್ ಘೋಷಣೆ !! ನವೆಂಬರ್೮ನೇ ತಾರೀಖಿನ ದಿನ ಮಧ್ಯರಾತ್ರಿ ಇಂದಲೇ ಜಾರಿ !!
 

ಸಾಮಾನ್ಯ ಜನರ ಅನುಕೂಲಕ್ಕೆ ಮತ್ತು ತಿಳುವಳಿಕೆಗೆ ಕೆಲವೊಂದು ಉಪಯುಕ್ತ ಮಾಹಿತಿ:

೧. ನಾಳೆ ಬ್ಯಾಂಕ್ ಮತ್ತು ಎಟಿಎಂ ಗಳು ಸ್ತಗಿತ !! ಆದರೇ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವದಕ್ಕೆ ಮಾತ್ರ ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಿವೆ.. 

೨. ನ್ಯಾಯವಾಗಿ ಕಷ್ಟಪಟ್ಟು ಗಳಿಸಿರುವ ಅಥವಾ ಸಂಗ್ರಹಿಸಿಟ್ಟಿರುವ ತಮ್ಮ ಹಣದ ಬಗ್ಗೆ ನಾಗರೀಕರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇಲ್ಲ.
 

೩. ಈಗಾಗಲೇ ತಮ್ಮ ಬ್ಯಾಂಕಿನ ಖಾತೆಯಲ್ಲಿರುವ ಹಣಕ್ಕೆ ಯಾವುದೇ ತೊಂದರೆಇಲ್ಲ. ಅದು ನಿಮ್ಮ ಖಾತೆಯಲ್ಲಿಯೇ ಸುರಕ್ಷಿತವಾಗಿಯೇ ಇರುತ್ತದೆ.
 

೪. ೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ನೋಟುಗಳನ್ನು ನಾಳೆ ಮತ್ತು ನಾಡಿದ್ದು ಯಾವುದೇ ಬ್ಯಾಂಕ್ ಅಥವಾ ಅಂಚೆ ಕಛೇರಿಗೆ ಹೋಗಿ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಬಹುದು. ಹಣ ಜಮಾ ಮಾಡುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ.
 

೫. ಹಣವನ್ನು ತಮ್ಮ ಖಾತೆಗೆ ಜಮಾಮಾಡಬಹುದು ಅಥವಾ ೫೦೦ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ಹಳೆಯ ನೋಟುಗಳನ್ನು ಕೊಟ್ಟು ಹೊಸದಾಗಿ ಚಲಾವಣೆಗೆ ಬಿಟ್ಟಿರುವ ಅಧಿಕೃತ ೫೦೦ ಮತ್ತು ೨೦೦೦ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು.
 

೬. ಆದರೆ ನಾಳೆ ಮತ್ತು ನಾಡಿದ್ದು ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳುವ ಮೊತ್ತವನ್ನು ಒಂದು ದಿನಕ್ಕೆ ೪೦೦೦ ಸಾವಿರ ರೂಪಾಯಿಗಳಿಗೆ ಸೀಮಿತಗೊಳಿಸಲಾಗಿದೆ. ತದನಂತರ, ತಮ್ಮ ಹತ್ತಿರ ವಿರುವ ಅಧಿಕೃತ ಹಣವನ್ನು ಡಿಸೆಂಬರ್ ೩೧ನೇ ತಾರೀಖಿನ ವರೆಗೆ ಯಾವುದೇ ಮಿತಿಇಲ್ಲದೆ ಹೊಸ ೫೦೦ ಮತ್ತು ೨೦೦೦ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ೫೦ ದಿನಗಳ ಕಾಲಾವಕಾಶ ವಿರುತ್ತದೆ.
 

೭. ಎಟಿಎಂ ಮೂಲಕ ದಿನಕ್ಕೆ ೨ ಸಾವಿರವನ್ನಷ್ಟೇ ಡ್ರಾ ಮಾಡಬಹುದು. ಬ್ಯಾಂಕ್ ಖಾತೆಯಿಂದ ಹಣ ವಿತ್‌ಡ್ರಾ ಮಾಡಬೇಕೆಂದರೆ, ದಿನಕ್ಕೆ ೧೦ ಸಾವಿರ ಮತ್ತು ವಾರಕ್ಕೆ ೨೦ ಸಾವಿರದ ಮಿತಿ ವಿಸಲಾಗಿದೆ. 
 

೮. ಆಧಾರ್ ಕಾರ್ಡ್‌ ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್‌ ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು.
 

೯. ನಾಳೆ ದೇಶದ ಯಾವುದೇ ಬ್ಯಾಂಕ್‌ ಕಾರ್ಯನಿರ್ವಹಿಸುವುದಿಲ್ಲ ಹಾಗೂ ನವೆಂಬರ್‌ ೯ ಮತ್ತು ನವೆಂಬರ್‌ ೧೦ ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ.
 

೧೦. ನಗದು ರಹಿತ ವ್ಯವಹಾರಗಳಿಗೆ ಅಂದರೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‌ಲೈನ್ ಫಂಡ್ ಟ್ರಾನ್ಸ್ಫರ್ ಇವುಗಳಿಗೆ ಯಾವುದೇ ತೊಂದರೆ ಇಲ್ಲ, ಎಂದಿನಂತೆ ಕಾರ್ಯನಿರ್ವಹಿಸಬಹುದು.
 

೧೧. ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್‌ಗಾಗಿ ನವೆಂಬರ್‌ ೧೧ರವರೆಗೊ ೫೦೦ ಮತ್ತು ೧೦೦೦ ಸಾವಿರ ರೂಪಾಯಿಯ ಹಳೆಯ ನೋಟುಗಳನ್ನು ಬಳಸಬಹುದಾಗಿದೆ.
 

೧೨. ಹೊಸ ಲಕ್ಷಣ, ಹೊಸ ವಿನ್ಯಾಸ, ಹೊಸ ಅಳತೆಯನ್ನು ಹೊಂದಿರುವ ಈ ನೋಟುಗಳು ನ. ೧೦ ರಿಂದ ಚಲಾವಣೆಗೆ ಬರಲಿವೆ.
 

೧೩. ರೂ. ೨೦೦೦ ನೋಟಿನಲ್ಲಿ ಒಂದು ಕಡೆಯಲ್ಲಿ ಮಂಗಳಯಾನ್ ಎಂದು ಬರೆಯಲಾಗಿದೆ.  

ಈ ಒಂದು ದಿಟ್ಟ ನಿರ್ಧಾರದ ಹಿಂದಿರುವ ಚಿಂತನೆ, ಆಲೋಚನೆ, ಹಾಗೂ ದೇಶವನ್ನು ಒಂದು ಹೊಸದಾದ ಕ್ರಾಂತಿಗೆ ಮತ್ತು ನಿಲುವಿಗೆ ಒಯ್ಯುವ ಯೋಚನೆ ಇನ್ನೂ ಮುಖ್ಯವಾಗಿ ಹೇಳುವುದಾದರೆ ಈ ಹೊಸ ನೋಟುಗಳ ಮುದ್ರಣದಲ್ಲಿ ಬಳಸಿರುವ ತಾಂತ್ರಿಕತೆ ಬಗ್ಗೆ ಇನ್ನಷ್ಟು ಕುತೂಹಲಕಾರಿ ಮಾಹಿತಿಗಳಿವೆ... 



ಜೈ ಕರ್ನಾಟಕ ಮಾತೆ.. ಕನ್ನಡವೇ ಸತ್ಯ, ಕನ್ನಡವೇ ನಿತ್ಯ..
ರಾಘವೇಂದ್ರ ಪ್ರಸಾದ್
ಬೆಂಗಳೂರು

Saturday, September 10, 2016

ಕಾವೇರಿ ಜೀವನದಿ, ಕರ್ನಾಟಕದ ಜೀವನಾಡಿ..


ಕಾವೇರಿ ಜೀವನದಿ, ಕರ್ನಾಟಕದ ಜೀವನಾಡಿ.. ಹೌದು ನಿಜ...
ಆದರೇ ಎರಡು ರಾಜ್ಯಗಳ ನಡುವೆ ನಡೆಯುತ್ತಿರುವ ಹೋರಾಟ, ಗುದ್ದಾಟದಲ್ಲಿ ಜನರ ಜೀವಗಳೇ ಆ ನದಿಯಲ್ಲಿ ತೇಲಿ ಹೋಗುತ್ತಿವೆ...


ಸ್ನೇಹಿತರೇ, ನಿಮೆಲ್ಲರ ಹೋರಾಟಕ್ಕೆ ಮತ್ತು ಅಭಿಪ್ರಾಯಕ್ಕೆ ಖಂಡಿತವಾಗಿಯೂನಮ್ಮ ಸಹಕಾರ ಹಾಗೂ ಬೆಂಬಲವಿದೆ. ಆದರೆ ಸಮಸ್ಯೆಯೇನೆಂದರೇ, ಒಬ್ಬ ಜನ ಸಾಮಾನ್ಯನಿಗೆ ಇರುವ ಕಾಳಜಿ, ದುಗುಡ, ಆಕ್ರೋಶ, ನೋವು, ನಮ್ಮ ರಾಜಕೀಯ ಪ್ರತಿನಿದಿಗಳಿಗೆ ಇಲ್ಲದೇ ಹೋಯಿತಲ್ಲಾ ಎಂದಷ್ಟೇ..

ನನಗೆ ಅರ್ಥವಾಗದೇ ಇರುವ ವಿಷಯವೇನೆಂದರೇ..ಕಾವೇರಿ ನೀರಿನ ವಿಷಯ ನಮ್ಮೆಲ್ಲರಿಗೂ ತಿಳಿದಿರುವಂತೆ ಸುಮಾರು ೩ ದಶಕಗಳಿಂದ ನಡೆಯುತ್ತಲೇ ಇದೆ.
ನನ್ನ ಆಲೋಚನೆಗೆ ಎಟುಕದ ಅಥವಾ ಪ್ರಶ್ನೆಯಾಗಿಯೇ ಉಳಿದಿರುವ ಕೆಲವು ಸಂಗತಿಗಳೆಂದರೆ...

  • ಕಾವೇರಿ ನೀರನ್ನು ಕರ್ನಾಟಕದಿಂದ ತಮಿಳುನಾಡಿಗೆ ಬಿಡಬೇಕೆಂದು ನ್ಯಾಯಾಲಯದ ತೀರ್ಪೆಂದು ಹೇಳುವುದಾದರೆ ಯಾವ ಅಂಕಿ ಅಂಶ ಆದರದ ಮೇಲೆ ಈ ತೀರ್ಪು ಬದ್ಧವಾಗಿದೆ ?
  • ಈ ವಾಸ್ತವಾಂಶಗಳನ್ನು ನಮ್ಮ ಮತ್ತು ನೆರೆ ರಾಜ್ಯದ ಕಾನೂನು ಪ್ರತಿನಿಧಿಗಳು ಸುಪ್ರೀಂ ನ್ಯಾಯಾಲಯದಲ್ಲಿ ಯಾವ ರೀತಿ ಮಂಡಿಸಿದ್ದಾರೆಂದು ನಮಗೆ ತಿಳಿದಿಲ್ಲ.. ಅಥವಾ ನಿಜವಾದ ಪರಿಸ್ಥಿತಿಯನ್ನು ನ್ಯಾಯಾಲಯದ ಮುಂದೆ ಇಟ್ಟಮೇಲೆಯೂ ಕರ್ನಾಟಕದಿಂದ ಕಾವೇರಿನೀರನ್ನು ತಮಿಳುನಾಡಿಗೆ ಬಿಡಬೇಕೆಂದು ತೀರ್ಪುಕೊಟ್ಟಿದಾರೆಯೇ ನ್ಯಾಯಾದೀಶರು ? ದೇವರೇ ಬಲ್ಲ..
  • ಪ್ರತೀ ಬಾರಿ ಕಾವೇರಿ ನೀರಿನವಿಷಯವನ್ನು ತಮಿಳುನಾಡಿನ ಮುಖ್ಯಮಂತ್ರಿಗಳು ಕೈಗೆತ್ತಿ ಕೊಂಡಾಗ..ಜಯ ಅವರದೇ.. ಇದರ ಹಿಂದೆ ಏನಿದೆ..ಈ ವಿಷಯವಾಗಿ ನೆರೆರಾಜ್ಯದವರೊಂದಿಗೆ ಕಾನೂನು ರೀತ್ಯಾ ಹೊರಡುವುದಕ್ಕೆ ಎಲ್ಲಿದೆ ಕೊರತೆ..ಕುಡಿಯುವುದಕ್ಕೂ ನಮಗೆ ನೀರಿಲ್ಲವೆಂದಮೇಲೂ, ನ್ಯಾಯಾಲಯದ ಆದೇಶಬಂದ ಕೂಡಲೇ ನೀರನ್ನು ಹೇಗೆ ಬಿಟ್ವಿ..ಈಗ ನಮ್ಮ್ ಜನರಿಗೆ ಕುಡಿಯುವುದಕ್ಕೆ ಏನಿದೆ ಪರ್ಯಾಯ ವ್ಯವಸ್ತೆ..??
  • ತಮಿಳುನಾಡು ಸುಪ್ರೀಂ ನ್ಯಾಯಾಲಯಕ್ಕೆ ಕೊಟ್ಟಿರುವ ಅಂಕಿಅಂಶಗಳು ಸುಳ್ಳಾ ಅಥವಾ ನಮ್ಮ ಪರ ವಕೀಲರು ಸಲ್ಲಿಸಿರುವ ಸತ್ಯಾಸತ್ಯತೆಗಳು ಸುಳ್ಳಾ..
  • ಕಾನೂನಿನ ಚೌಕಟ್ಟಿನಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಲೇಬೇಕೆಂದು ತೀರ್ಪೇ ಇದ್ದರೆ, ಅವರು ಪ್ರತಿ ಬಾರಿ ನೀರು ಬಿಡಿಎಂದು ನಮ್ಮನ್ನು ಕೇಳುವುದ್ಯಾಕೆ.. ನಾವು ಬಿಡುವುದಿಲ್ಲ ವೆನ್ನುವುದ್ಯಾಕೆ..ಬಿಡುವುದಿಲ್ಲ ವೆನ್ನುವುದೇ ನಮ್ಮ ವಾದವಾಗಿದ್ದು ಹಾಗೂ ಪರಿಸ್ತಿತಿಯು ಅದಕ್ಕೆ ಎಡೆ ಮಾಡಿಕೊಡದೆ ಇದ್ದ ಸಂದರ್ಭದಲ್ಲೂ ನೀರನ್ನು ತಮಿಳುನಾಡಿಗೆ ಬಿಡಲೇ ಬೇಕಾದ ಒತ್ತಡವಿದೆ ಎಂದರೆ ಇದಕ್ಕೆ ಏನು ಕಾರಣ, ಯಾರು ಕಾರಣ.. ? ಎಲ್ಲರಿಗೂ ತಿಳಿದಿರುವಂತೆ ಡ್ಯಾಮ್ ತುಂಬಿ ಓವರ್‌ಫ್ಲೋ ಆದರೆ, ಮೇಲೆ ಹರಿಯುವ ನೀರನ್ನು ಯಾರು ತಡೆಯುವುದಿಲ್ಲ..ಅದು ನೆರೆ ರಾಜ್ಯಕ್ಕೆ ಹೋಗಿಯೇ ತೀರುವುದು..
  • ನೆರೆ ರಾಜ್ಯದಿಂದ ಕಾವೇರಿನೀರಿಗಾಗಿ ಬೇಡಿಕೆ ಇಡುತ್ತಿರುವವರು ರಾಜಕೀಯದವರೇ..ಅವ್ರು ಈ ಬೇಡಿಕೆಯನ್ನು ಮುಂದಿಟ್ಟಾಗ ಅವರ ರಾಜಕೀಯದ ಸಾಧಕ ಬಾಧಕಗಳನ್ನು ಯೋಚಿಸಿರುವುದಿಲ್ಲವೇ.. ಯಾವುದೇ ರಾಜ್ಯದ ಮುಖ್ಯಮಂತ್ರಿ ಆದರೂ ಎಲ್ಲರಿಗೂ ಒಂದೇ ರೀತಿಯ ಅಧಿಕಾರ, ಸ್ತಾನ, ಮಾನ, ಗೌರವಗಳು ಇರುತ್ತವೆ.. ನಮ್ಮ ಮುಖ್ಯಮಂತ್ರಿಗಳಿಗೆ ತಮ್ಮ ಅಧಿಕಾರವನ್ನು ಉಪಯೋಗಿಸಿಕೊಂಡು ರಾಜ್ಯದ ಜನತೆಗೆ ನ್ಯಾಯ ಒದಗಿಸಿ ಕೊಡುವುದಕ್ಕಿಂತಲೂ ಬೇರೆ ಏನು  ಘನ ಕಾರ್ಯವಿದೆಯೋ ಆ ಭಗವಂತನೇ ಬಲ್ಲ..ಅವರಿಗೆ ಪ್ರತಿ ಬಾರಿಯೂ ತಲೆಬಗ್ಗಿಸಿ ಕೊಂಡು ಆದೇಶವನ್ನು ಪಾಲಿಸುವುದೆಂದರೆ ಅವರಿಗೆ ಒಂದು ರೀತಿ  ಅಭ್ಯಾಸವಾಗಿಬಿಟ್ಟಿದೆ..  
  • ಅಥವಾ ಈ ರೀತಿ ಸುಮ್ಮನಿರುವುದಕ್ಕೆ ಎಷ್ಟು ತಗೊಂಡಿದ್ದಾರೋ ಏನೋ ಯಾರಿಗ್ ಗೊತ್ತು...ಎನ್ಬೇಕಾದ್ರು ನಡಿಬೌಹ್ಡು.. ರಾಜಕೀಯದಲ್ಲಿ..
  • ಈ ವಿಷ್ಯವಾಗಿ ನಮ್ಮ ಇಡೀ ರಾಜ್ಯದಲ್ಲಿ ದನಿಎತ್ತಿ ಹೋರಾಡುವ ಒಬ್ಬ ರಾಜಕೀಯ ಗಂಡಸು ನಮ್ಮಲ್ಲಿಲ್ಲವೇ ? ಅಥವಾ ಗಂಡಸರು ಇದ್ದರೂ ಈ ವಿಷಯವನ್ನು ಕೈಗೆತ್ತಿ ಕೊಂಡು ನ್ಯಾಯಾಲಯದ ತೀರ್ಪನ್ನು ಪ್ರಶ್ನೆಮಾಡುವ, ಮತ್ತು ವಾಸ್ತವಾಂಶವನ್ನು ಮನವರಿಕೆ ಮಾಡಿಕೊಡುವ ಗಂಡಸ್ತನ ಯಾರಿಗೂ ಇಲ್ಲವೇ.. ಅಥವಾ ಯಾರಿಗೂ ಬೇಕಿಲ್ಲವೇ..
  • ತಮಿಳುನಾಡಿನಲ್ಲಿ ಅವರಿಗೆ ಸಾಕಾಗುವಷ್ಟೂ ನೀರಿದ್ದರೂ ನಮ್ಮ ರಾಜ್ಯದಿಂದ ಕಾವೇರಿ ನೀರನ್ನು ಕಸಿದುಕೊಳ್ಳುವಲ್ಲಿ ಪ್ರತೀ ಬಾರಿಯೂ ಯಶಸ್ಸು ಅವರದೇ.. ಸುವರ್ಣ ನ್ಯೂಸ್ನ್ ಕವರ್ ಸ್ಟೋರೀ ನಲ್ಲಿ ಕೆಲವೊಂದು ವಿಷಯಗಳನ್ನು ನೆನ್ನೆ ಟಿವಿಯಲ್ಲಿ ನೋಡಿದೆ, ಅದು ನಿಜವೇ ಆದರೇ, ನಮ್ಮ ರಾಜ್ಯದ ನಾಯಕರು ಯಾಕೆ ಹಿಂಜರಿಯುತ್ತಿದ್ದಾರೆ..

ನೆನ್ನೆ ಇಡೀ ರಾಜ್ಯದಲ್ಲಿ ನಡೆದ ಮುಷ್ಕರ, ಪ್ರತಿಭಟನೆಗೆ ನಮಗೆ ನಿಜವಾಗಲೂ ನ್ಯಾಯ ಸಿಗ್ಗುತ್ತೆ ಎಂದು ನಿಮಗೆ ನಂಬಿಕೆ ಇದೆಯೇ ಅಥವಾ ಕೇವಲ ಮತ್ತೊಂದು ದಿನ ರಜೆ ಸಿಕ್ಕಿತ್ತೆಂದು ಅಷ್ಟರಲ್ಲಿಯೇ ಸಮಾಧಾನ ಮಾಡಿಕೊಳ್ಳಬೇಕೆ ??

ಕೊನೆಗೆ ನನಗನಿಸ್ಸಿದ್ದು ಇಷ್ಟೇ.. ಇದರಲ್ಲಿ ಏನೋ ಒಳ ಕುತಂತ್ರ, ಲಾಬೀ ನಡೆಯುತ್ತಿದೆ ಅಷ್ಟೇ.. ಮತ್ತಿನ್ನೇನೂ ಇಲ್ಲ.. ಕರ್ನಾಟಕದ ಕಾವೇರಿ ನೀರನ್ನು ಮಾರಾಟಕ್ಕಿಟ್ಟಿದ್ದಾರೆ ಅಷ್ಟೇ.. ರಾಜ್ಯದ ಜನರಿಗೆ ಕಣ್ಣೊರೆಸುವ ಮಾತುಗಳನ್ನಾಡುತ್ತಾ ಮೋಸ ಮಾಡುತ್ತಿದ್ದಾರಷ್ಟೇ..

ಈ ವಿಷಯವಾಗಿ ನಾವು ನಮ್ಮ ಪರಿಮಿತಿಯಲ್ಲಿ ಏನು ಮಾಡುವುದಕ್ಕೆ ಸಾಧ್ಯವೋ ಅದೆಲ್ಲವನ್ನೂ ಮಾಡುವುದಕ್ಕೆ ಸಿದ್ಧ.. ಆದರೆ ಮಾತನಾಡಬೇಕಾದವರು, ಹೋರಾಡಬೇಕಾದವರು.. ಸುಮ್ಮನೆ ತೆಪ್ಪಗೆ ಕೈಕಟ್ಟಿಕೊಂಡು ಕುಳಿತಿದ್ದಾರೆ ಎನ್ನುವುದೇ ಬೇಸರದ ಸಂಗತಿ.. ಇನ್ನೂ ಕೆಲ ಬೇಜವಾಬ್ಧಾರಿ ಪ್ರತಿನಿಧಿಗಳು ನಮಗೂ ಇದಕ್ಕೂ ಯಾವುದೇ ಸಂಭಂದವೇ ಇಲ್ಲವೆನ್ನುವ ರೀತಿಯಲ್ಲಿ ಆರಾಮವಾಗಿ ಬೇರೆಯೇ ಲೋಕದಲ್ಲಿದ್ದಾರೆ, ಇನ್ನು ಕೆಲವರಂತೂ ಆನ್‌ಲೈನ್ನಲ್ಲಿ ತಮ್ಮ ದುರಹಂಕಾರ, ಉದ್ಧಟತನವನ್ನು ತೋರಿಸುತ್ತಿದ್ದಾರೆ..ಇವರೆಲ್ಲರಿಗೂ ಕಾಲವೇ ಉತ್ತರಿಸಬೇಕು.. ಜೊತೆ ಜೊತೆಯಲ್ಲಿ ನಾವು ಕೂಡ ಸಮಯ ನೋಡಿ ಬುದ್ಧಿಕಲಿಸಬೇಕಾಗುತ್ತದೆ..

ಇದರ ಬಗ್ಗೆ ಎಷ್ಟೇ ಮಾತನಾಡಿದರೂ, ಎಷ್ಟು ಬರೆದರೂ ಅಷ್ಟೇ.. ಎಲ್ಲಿಯವರೆಗೆ ಇಂತಹ ನಿಷ್ಪ್ರಯೋಜಕ ಸ್ವಾರ್ಥ ರಾಜಕಾರಣಿಗಳು ಇರುತ್ತಾರೋ ಅಲ್ಲಿಯವರೆಗೆ ನಮಗೆ ನ್ಯಾಯಸಿಗುತ್ತೆಂದಾಗಲಿ ಅಥವಾ ಯಾವುದೇ ರೀತಿಯ ಪ್ರಯೋಜನ ವಾಗುತ್ತೆಂದು ನನಗನಿಸ್ಸುತ್ತಿಲ್ಲ..

ಆದರೇ ನಮ್ಮ ಅಂತರಾಳದ ಬೆಂಕಿ, ಕಿಚ್ಚು.. ಆರುತ್ತಿಲ್ಲ.. ಏನುಮಾಡಬಹುದು ನೀವೇ ಹೇಳಿ..




ಇಂತಿ,
ರಾಘವೇಂದ್ರ ಪ್ರಸಾದ್
ಕನ್ನಡಾಭಿಮಾನಿ
ಬೆಂಗಳೂರು.

Thursday, June 2, 2016

ಪಂಚ್ ಫಲಿತಾಂಶ - ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಂದಿದೆ..

ಮೊದಲನೆಯದಾಗಿ, ದಕ್ಷಿಣ ಭಾರತದ ನಮ್ಮ ನೆರೆ ರಾಜ್ಯವಾದ ತಮಿಳುನಾಡಿನಲ್ಲಿ ಮತ್ತೊಮ್ಮೆ 'ಅಮ್ಮ' ನ ಕೂಗು ಎಲ್ಲ ಮತದಾರರ ಮನ ಮುಟ್ಟಿದಂತಿದೆ. ತಮಿಳುನಾಡಿನಲ್ಲಿ, ಎಐಎಡಿಮ್ ಕೆ ಯ, ಜಯಲಲಿತಾ "ಅಮ್ಮ" ಮತ್ತೆ ಜಯಭೇರಿ ಬಾರಿಸಿದ್ಧಾರೆ. ನೀರಿನಂತೆ ಹರಿಸಿದ ಉಚಿತ ಉಡುಗೊರೆಗಳಿಗೋಯೇನೋ ಗೊತ್ತಿಲ್ಲ !! ಈ ಹಿಂದೆ ನಡೆದ ಎಲ್ಲಾ ಘಟನೆಗಳನ್ನೂ ಮತದಾರ ಸಂಪೂರ್ಣವಾಗಿ ಮರೆತಂತಿದೆ.. ಏನೇ ಆದರೊ ಅಮ್ಮನ ರಾಜಕೀಯ ತಂತ್ರಗಾರಿಕೆಯನ್ನು ಗಮನಿಸಲೇಬೇಕು ಹಾಗೂ ಮೆಚ್ಚಲೇಬೇಕಾದ ವಿಷಯ. 142/232

ಎರಡನೆಯದಾಗಿ, ದಕ್ಷಿಣ ಭಾರತದ ನಮ್ಮ ಮತ್ತೊಂದು ನೆರೆ ರಾಜ್ಯವಾದ ಕೇರಳದಲ್ಲಿ ನಿರೀಕ್ಷಿತ ಪಲಿತಾಂಶವೆಂದು ಕೊಂಡರೂ, ಒಂದು ರೀತಿಯ ಆಶ್ಚರ್ಯವೂ ಹೌದು!! ಯಾಕೇಂ್ತೀರ ? ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗವು (ಎಲ್‌.ಡಿ.ಎಫ್), ಆಡಳಿತಾರೂಢ ಸಂಯುಕ್ತ ಪ್ರಜಾಸತ್ತಾತ್ಮಕ ರಂಗವನ್ನು ಧೂಳೀಪಟ ಮಾಡುವಲ್ಲಿ ಭಾರಿ ಯಶಸ್ಸು ಸಾಧಿಸಿದೆ. ಅಲ್ಲದೆ, ಇದೇ ಮೊದಲ ಬಾರಿಗೆ ಬಿಜೆಪಿಯು ವಿಧಾನಸಭೆಗೆ ಪದಾರ್ಪಣೆ ಮಾಡುವ ಸುಯೋಗಕ್ಕೆ ಪಾತ್ರವಾಗಿದೆ. ಎಲ್.ಡಿ.ಎಫ್ ಪಕ್ಷವನ್ನು ಪ್ರತಿನಿದಿಸಿ ಚುನಾವಣಾ ಕಣಕ್ಕೆ ಇಳಿದ ವಿ. ಎಸ್. ಅಚ್ಚುತಾನಂದನ್ ಅವರ ವಯಸ್ಸೇನು ಕಮ್ಮಿ ಇಲ್ಲಾ ರೀ.. ಸರಿ ಸುಮಾರು 93 ವರ್ಷ ಅವರಿಗೆ. ಸಾಮಾನ್ಯವಾಗಿ ವಯಸ್ಸಾದವರಿಗೆ ಅಧಿಕಾರ ಕೊಟ್ಟರೆ ಈ ವಯಸ್ಸಿನಲ್ಲಿ ಏನು ತಾನೇ ಮಾಡಿಯಾರು ಅಥವಾ ಎಷ್ಟು ದಿನ ಮಾಡಿಯಾರು ಎಂಬ ಯೋಚನೆ ಯಾವುದೇ ಮತದಾರನಿಗೂ ಬಾರದೇಹೋಗದು. ಆದರೆ, ವಿ. ಎಸ್. ರವರ ಉತ್ಸಾಹ, ಜೀವನ ಶೈಲಿ, ಸಂಘಟನಾ ಶಕ್ತಿ, ಕಾರ್ಯತತ್ಪರತೆ, ಮುಂದಾಳತ್ವದ ಗುಣಗಳು ಇವೆಲ್ಲಾ ಪ್ರಾಯಶಃ ಮತದಾರ ಇವರ ವಯಸನ್ನು ಪಕ್ಕ ಕಿಟ್ಟು ಇವರಿಗೆ ಮತ ಹಾಕಿ ಈ ಭಾರೀ ಗೆಲ್ಲಿಸಿದ್ದಾರೆ. ತಿರುವನಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಕ್ರಿಕೆಟಿಗ ಶ್ರೀಶಾಂತ್ ಗೆ ಹೀನಾಯ ಸೋಲು. 91/140

ಮೂರನೆಯದಾಗಿ, ಪಶ್ಚಿಮ ಬಂಗಾಳ. ಇಲ್ಲಿ ಮತ್ತೋರ್ವಪ್ರತಿಭಾನ್ವಿತ ಮಹಿಳೆ ತೃಣಮೂಲ ಕಾಂಗ್ರೆಸ್ ನ ಮಮತಾ ಬ್ಯಾನೆರ್ಜೀ ಎದುರಾಳಿ ಪಕ್ಷಗಳನ್ನು ನಿಜವಾಗಿ ಗುಡಿಸಿ ಗುಂಡಾಂತರ ಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು. ಇವರ ಮುಂದೆ ಎಡರಂಗ ಕಾಂಗ್ರೆಸ್ ಆಟ ನಡೆಯಲಿಲ್ಲ. ಬಿಜೆಪಿಯ ಆಟವೂ ಕೂಡ ಇವರ ಎದುರು ನಡೆಯಲಿಲ್ಲ. ಎರಡನೆಯ ಬಾರಿಗೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. 217/294

ನಾಲ್ಕನೆಯಾದ್ದಾಗಿ, ನಮ್ಮ ಈಶಾನ್ಯ ಭಾಗಾದ ಅಸ್ಸಾಂ ರಾಜ್ಯ. ದೆಹಲಿ, ಬಿಹಾರದ ನಂತರ ಮೋದಿ ಮತ್ತು ಅಮಿತ್ ಶಾಗೆ ಒಂದು ರೀತಿಯ ರಿಲೀಫ್ ಅಂತಾನೆ ಹೇಳಬಹುದು. ಯಾಕಂದ್ರೆ, ಭಾರತದ ಈಶಾನ್ಯ ರಾಜ್ಯಗಳಲ್ಲಿ ನಮ್ಮ ಕೇಂದ್ರಾಡಳಿತ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಗೆ ಎಲ್ಲೂ ಅಸ್ತಿತ್ವವೇ ಇಲ್ಲದಿದ್ದಂತ ಪರಿಸ್ತಿತಿಯಲ್ಲಿ ಇದು ಅವರಿಗೆ ಪ್ರಪ್ರಥಮ ಸ್ಪಷ್ಟ ಬಹುಮತದ ಗೆಲುವು ಹಾಗೂ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಪಡೆಯುವುದು ಬಹುತೇಕ ಖಚಿತವಾಗಿದೆ. ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿ ಚುನಾವಣಾ ಕಾರ್ಯತಂತ್ರ ರೂಪಿಸಿ ಚುನಾವಣಾ ಕಣಕ್ಕಿಳಿದಿದ್ದರಿಂದ ಭಾರೀ ಬಹುಮತದೊಂದಿಗೆ ಬಿಜೆಪಿ ಗೆಲುವು ಸಾಧಿಸಿದೆ. ಸರ್ಬಾನಂದ ಸೋನಾವಾಲ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರಲಿದ್ದಾರೆ. ಸುಮಾರು ಹದಿನೈದು ವರ್ಷಗಳ ಕಾಂಗ್ರೆಸ್ ಆಡಳಿತಕ್ಕೆ ಒಂದು ಮುಕ್ತಾಯ ಪರದೆ ಎಳೆದಂತಿದೆ. 'ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಐತಿಹಾಸಿಕ ಜನಾದೇಶ'ವೆಂದು ಪ್ರಧಾನಿ ನರೇಂದ್ರ ಮೋದಿಯವರು ಈ ಯಶಸ್ಸಿಗೆ ಪ್ರತಿಕ್ರಿಯಿಸಿದ್ದಾರೆ. 88/126

ಕೊನೆಯದಾಗಿ, ಪುದುಚೇರಿಯಲ್ಲಿ ಅಷ್ಟೇನೂ ಪೈಪೋಟಿ ಇಲ್ಲದೆ ಇದ್ದರೂ ಕಣದಲ್ಲಿ ಗೆದ್ದವರು ಯಾರು ಎಂದು ಹೇಳಲು ಇನ್ನೂ ಕಾದು ನೋಡಬೇಕು. ಪುದುಚೆರಿಯಲ್ಲಿ ಮುಖ್ಯಮಂತ್ರಿ ಎಐಎನ್‌ಆರ್‌ಸಿ ಹಾಗೂ ಕಾಂಗ್ರೆಸ್ – ಡಿ.ಎಂ.ಕೆ. ಮೈತ್ರಿಕೂಟ ಒಟ್ಟು ಮೂವತ್ತು ಸ್ಥಾನಗಳಲ್ಲಿ ಸಮಬಲದ ಪ್ರದರ್ಶನ ನೀಡುತ್ತಿದ್ದು, ಅಂತಿಮವಾಗಿ ಜಯಮಾಲೆ ಯಾರ ಕೊರಳಿಗೆ ಎಂಬುದು ಇದೀಗ ಕುತೂಹಲದ ಪ್ರಶ್ನೆ. ಆದರೆ ಐದೂ ಪಕ್ಷಗಳ ಫಲಿತಾಂಶ ವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ ಕಾಂಗ್ರೆಸ್ ಪಕ್ಷ. ಆತ್ಮಾವಲೋಕನ ಮಾಡ್ಕೊಳ್ತಾರೋ ಇಲ್ಲವೋ ಗೊತ್ತಿಲ್ಲ.. ಮಾಡ್ಕೊಂಡ್ರೆ ಅವ್ರ್ಗೇ ಒಳ್ಳೆದು.. ಇಲ್ಲಾಂದ್ರೆ ಬೇರೆ ಪಕ್ಷಗಳಿಗೆ ಒಳ್ಳೆದು.. ಅಷ್ಟೇ.. ಕಾಂಗ್ರೆಸ್ ನ್ ಈ ಹೀನಾಯ ಸೋಲು ಮುಂದೊಂದು ದಿನ ನಮ್ಮ ರಾಜ್ಯದ ಮೇಲೂ ಪರಿಣಾಮ ಬೀರಬಹುದು !! 17/30.
ಪ್ರೀತಿಯ ಸ್ನೇಹಿತರೇ, ಆತ್ಮೀಯ ಬಂಧುಗಳೇ, ಹಾಗೂ ವಾಟ್ಸ್ಆಪ್ ಪ್ರೇಮಿಗಳೇ...

ಇತ್ತೀಚೆಗೆ ನಾನು ಓದುತ್ತಿದ್ದ ಒಂದು ಮಾಧ್ಯಮ ಪುಸ್ತಕದ ಕೆಲವು ಆಯ್ದ ಸೂಕ್ಷ್ಮವಿಷಯಗಳ ಬಗ್ಗೆ ಇಲ್ಲಿ ಹಂಚಿಕೊಳ್ಳುತ್ತಾ ನನ್ನ ಅಭಿಪ್ರಾಯವನ್ನೂ ನಿಮ್ಮ ಮುಂದಿಡುತ್ತಿದ್ದೀನಿ...

ನಿಮೆಲ್ಲರಿಗೂ ತಿಳಿದಿರುವಂತೆ,
ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಕಾಲ ಕಾಲಕ್ಕೆ ಸರಿಯಾಗಿ ಮಳೆ ಇಲ್ಲ. ಕುಡಿಯುವುದಕ್ಕೆ ಒಂದು ಹನಿ ನೀರು ಸಿಗುತಿಲ್ಲ. ಮಲಗಲು ಸೂರಿಲ್ಲ. ಆಟವಾಡಲು ಮೈದಾನಗಳಿಲ್ಲ. ನಡೆದಾಡಲು ಯೋಗ್ಯವಾದ ರಸ್ತೆಗಳಿಲ್ಲ. ಜನ ಬಯಸೋ ಅಂತ ಒಳ್ಳೆ ಆಡಳಿತವಿಲ್ಲ. ಬಡವರಿಗೆ ಬೆಲೆ ಇಲ್ಲ. ಭಾವನೆಗಳಿಗೆ ಅರ್ಥವಿಲ್ಲ. ರೈತರಿಗೆ ರಕ್ಷಣೆ ಇಲ್ಲ. ಓದು ಬರವಣಿಗೆಗೆ ಜಾಗವೇ ಇಲ್ಲ. ದ್ವೇಷದ ರಾಜಕಾರಣಕ್ಕೆ ಕೊನೆಯೇ ಇಲ್ಲ...ಈ ಪಟ್ಟಿಗೂ ಕೊನೆ ಇಲ್ಲ....

ನಾನೊಬ್ಬ ಹವ್ಯಾಸಿ ಪತ್ರಕರ್ತ ಹಾಗೂ ಛಾಯಾಗ್ರಾಹಕ..
"ಈ ಜಗತ್ತನ್ನು ಬದಲಿಸಬೇಕೆಂದು ನೀವು ಬಯಸಿದರೆ, ಅದಕ್ಕಿರುವ ತಾತ್ಕಾಲಿಕ ಆಯುಧವೆಂದರೆ ಪತ್ರಿಕೋದ್ಯಮವೆಂಬುದನ್ನು ನಾನು ಈಗಲೂ ನಂಬುತ್ತೇನೆ" ಎನ್ನುವ ಟಾಮ್ ಸ್ಟೊಪಾರ್ಡ್ನ, ಈ ಮಾತು ಮಾಧ್ಯಮದ ವಿರಾಟ್ ಶಕ್ತಿಗೆ ಹಾಗೂ ಅದರ ಮಿತಿಗೆ ಸಾಕ್ಷಿ.
ಹಾಗೂ ನನಗೆನಿಸುವ ಮಟ್ಟಿಗೆ ಏಕೈಕ ಸಾಧನೆಯ ಹಾದಿಯೂ ಹೌದು...

ಈ ನಿಟ್ಟಿನಲ್ಲಿ ಯೋಚಿಸುತ್ತಿರುವಾಗು ನನಗನಿಸಿದ್ದು "ನಾವು ಕಲಿತಿದ್ದೇನು, ಸಾಧಿಸಿದ್ದೇನು" ಎಂದು..
ನನಗೆ ಛಾಯಾಗ್ರಹಣದಷ್ಟೇ ಪ್ರಿಯವಾದ, ಮನಸ್ಸಿಗೆ ಹತ್ತಿರವಾದ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು ಹಾಗೂ ಕ್ರಿಯಾಶೀಲ ಬರವಣಿಗೆ. ಒಬ್ಬನೇ ಕೂತು ಇದರ ಬಗ್ಗೆ ವಿಚಾರಮಾಡಿದಾಗ ನನಗನಿಸಿದ್ದು ಇವತ್ತಿನ ವಾಟ್ಸ್ಆಪ್, ಟ್ವಿಟರ್ ಗಳ ಮದ್ಯೆ ನನ್ನ ಓದು ಮತ್ತು ಬರವಣಿಗೆ ಕ್ಷೀಣಿಸುತ್ತಿದೆಯೇ ಎಂದು..

ಒಂದು ಬಾರಿ ಹಿಂತಿರುಗಿ ನೋಡಿದರೆ, ಅಯ್ಯೋ ಎಷ್ಟೋಂದು ಅಮೂಲ್ಯವಾದ ಸಮಯವನ್ನು ಹಾಳುಮಾಡಿದೆನಲ್ಲ ಎಂದು ಬೇಸರವಾಗುತ್ತದೆ. ಹಾಗೆಯೇ ತಾತ್ಕಾಲಿಕವಾಗಿ ಉಪಯುಕ್ತವೆನಿಸುವ ಈ ಎಲ್ಲಾ ಸೂಕಾಲ್ಡ್ ಸೋಶಿಯಲ್ ಮೀಡಿಯಾದ ಬಳಕೆಯಿಂದ ನಮ್ಮತನವನ್ನು ಬಿಟ್ಟು ಕೊಳ್ಳುತ್ತಾ, ಭಾವನೆಗಳೇ ಇಲ್ಲದೆ ಬದುಕುತ್ತಿದ್ದೀವೇನೋ ಎಂದೆನಿಸಲು ಶುರುವಾಗಿದೆ.
ಯಾರಾದರೂ ಮೆಸೇಜ್ ಕಳುಹಿಸಿದ್ದಾರೇನೋ, ತತ್‌ಕ್ಷಣ ಪ್ರತಿಕ್ರಯಿಸದಿದ್ದರೆ ಏನೋ ? ಉತ್ತರಿಸದಿದ್ದರೆ ಏನೆಂದು ಕೊಳ್ಳುತ್ತಾರೋ ? ಗೊತ್ತಲ್ಲ ಅಪಹಾಸ್ಯಗಳು, ಟೀಕೆ ಟಿಪ್ಪಣಿಗಳು ಇತ್ಯಾದಿ... ನಾವೇನೋ ಅದಕ್ಕೆ ಬದ್ದರಾಗಿದ್ದೆವೇನೋ ಎನ್ನುವ ರೀತಿ.. ನಮಗೆ ಅನುಕೂಲ ವಾಗುವಂತೆ, ಇಷ್ಟವಾದಂತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸ್ವಾತಂತ್ರವೇ ಇಲ್ಲದಂತಾಗಿದೆ. ಒಂದು ರೀತಿಯ ಕಟ್ಟುಪಾಡಾಗಿಬಿಟ್ಟಿದೆ.. ಸಂಬಂಧಗಳ ಬಗ್ಗೆ ಯೋಚಿಸಲೂ ಸಮಯವಿಲ್ಲದಂತಾಗಿದೆ.

ನಿಜವಾಗಿಯೂ ನಿಮ್ಮ ಮನಸಾಕ್ಷಿಯಾಗಿ ಹೇಳಿ.. ಒಂದು ನಿಮಿಷ ಮನಸ್ಸು ಪ್ರಶಾಂತವಾಗಿರಲು ಇವುಗಳೆಲ್ಲ ಒಂದು ರೀತಿಯ ತೊಡಕುಗಳು ಎಂದೆನಿಸುತ್ತದೆ. ಹೌದೋ ಅಲ್ಲವೋ !!

ಅವೆಲ್ಲಾ ಬಿಡಿ, ಸದ್ಯಕ್ಕೆ ನಾನು ಇವೆಲ್ಲದರಿಂದ ದೂರವಿರಬೇಕು ಎಂದು ಮನಸ್ಸು ಮಾಡಿದ್ದೀನಿ..
ವಾಟ್ಸಾಪ್ ಇಲ್ಲದೆ ಇದ್ದರೆ ಬೆಳಗಾಗುವುದೇ ಇಲ್ಲ, ಜೀವನವೇ ಇಲ್ಲ.. ನೀವ್ ಯಾವ ಕಾಲದಲ್ಲಿದ್ದೀರಾ ಸ್ವಾಮಿ.. ಅಂತ ಹೇಳುವವರು ನಮ್ಮ ಸುತ್ತಲೂ ದಿನಾ ನೋಡುತ್ತೀವಿ.. ನೋಡೇಬಿಡೋಣ ಒಂದು ಕೈಅಂತ ಸದ್ಯಕ್ಕೆ ವಾಟ್ಸಾಪ್ ನಿಂದ ದೂರಸರಿಯುತ್ತಿದೇನೆ.. ನನಗಿಷ್ಟವಾದ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದೇನೆ..

ಯಾವತ್ತಿಗೂ ನಮನ್ನು ಕೈಹಿಡಿಯುವ ಪುಸ್ತಕಗಳು, ಬರಹಗಳು ಇವುಗಳ ಕಡೆಗೆ ನಿರಂತರವಾಗಿ ಸಮಯವನ್ನು ಮೀಸಲಿಡಲು ಯೋಚಿಸಿದ್ದೇನೆ ಮತ್ತು ಅದಕ್ಕೆ ಪೂರಕವಾಗಿ ನನ್ನ ಮನಸ್ಸು ಕೂಡ ಹಾತೊರೆಯುತ್ತಿದೆ...

ನಿಮೆಲ್ಲರ ದೂರವಾಣಿ, ಮೊಬೈಲ್ ನಂಬರ್ ಗಳು ನನ್ನ ಬಳಿ ಇಟ್ಟು ಕೊಂಡಿರುವೆ.. ಮಾತನಾಡ ಬೇಕೆಂದೆನಿಸಿದರೆ ಕರೆ ಮಾಡಿ ಮಾತನಾಡುವೆ..ನೀವೂ ಕರೆಮಾಡಿ ಮನಸಾರೆ ಮಾತನಾಡೋಣ...

ಇದು ಯಾರಿಗೂ ಕೈತೋರಿಸಿ ಮಾತಾಡುವ, ಟೀಕಿಸುವ ಉದ್ದೇಶವಂತೂ ಅಲ್ಲವೇ ಅಲ್ಲ, ಅದಕ್ಕೆ ನನಗೆ ಸಮಯವೂ ಇಲ್ಲ.. ನಿಮ್ಮ ನಿಮ್ಮ ಆಲೋಚನೆಗಳಿಗೆ, ಆದರ್ಶಗಳಿಗೆ, ಸ್ವಾತಂತ್ರಕ್ಕೆ ನಮ್ಮ ಅಡ್ಡಿಯೇನೂ ಇಲ್ಲ..ಅಥವಾ ನೀವಂದು ಕೊಂಡಂತೆ ನಾನು ಇವೆಲ್ಲದರ ವಿರೋಧಿಯೂ ಅಲ್ಲ !!

ಟೈಪ್ ಮಾಡಲು ಸಮಯ, ತಾಳ್ಮೆ ಎರಡೂ ಇದ್ದಾಗ ಇದೆ ಸಂದೇಶವನ್ನು ವಾಟ್ಸಾಪ್ ನಲ್ಲೂ ಕಳುಹಿಸುತ್ತೀನಿ...
ಒಂದನ್ನು ಪಡೆಯಬೇಕಾದರೆ, ಇನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವಂತೆ...

ಇದು ಕೇವಲ ನಾನು ತೆಗೆದು ಕೊಂಡ ಒಂದು ಹೆಜ್ಜೆ ಅಷ್ಟೇ
ನನಗೆ ಹೇಳಬೇಕೆಂದನಿಸಿತು, ಅದಕ್ಕೆ ಇಷ್ಟೆಲ್ಲಾ ಹೇಳ್ದೆ...

ನಮಸ್ಕಾರ,
ರಾಘವೇಂದ್ರ ಪ್ರಸಾದ್. ಹೆಚ್. ಪಿ.
ಮೊಬೈಲ್: ೯೯ ೦೦ ೧೪೯೯೭೦